ಏನೆಂದು ಹಾಡಲಿ

ಏನೆಂದು ಹಾಡಲೀ ಏನನ್ನು ಹಾಡಲೀ ನಿಮ್ಮ ಮುಂದೆ ನಿಂತು
ಒಡೆದ ಗಂಟಲಿಂದಾ ಬಿರಿದ ಒಣಾ ನಾಲಿಗಿಂದ ||ಪ||

ಕಣ್ಣು ಕಣ್ಣುಗಳ ಚಿಕ್ಕೆ ಕಾಂತಿಗಳು ನಂದಿ ನರಳುತಿರಲು
ಬಾನ ಚಿಕ್ಕೆಗಳ ಬೆಣ್ಣೆ ಚಂದ್ರಮನ ತೋರಿ ಹಾಡಲೇನು
ಮಣ್ಣ ಜೀವಗಳ ಬಳ್ಳಿ ಗಿಡಗಳಿಗೆ ಮುಳ್ಳುಹೋದರು ಮುಚ್ಚಿ
ಚುಚ್ಚುತಿರಲು ಆ ಸಗ್ಗ ನಂದನವ ಕೊಂಡು ಕೊನರಲೇನು ||೧||

ಎಲುಬು ಗೂಡುಗಳ ಹರಿದ ಚಿಂದಿಗಳ ಬಿಟ್ಟು ಸುತ್ತ ಮುತ್ತ
ಗುಲಾಬಿಯ ಕೆನ್ನೆ ತೊಂಡೆಗುಟಿ ಕನ್ಯೆ ಎಂದು ಕನವರಿಸಲೆ
ಕೊಳಚೆ ಕೊಂಪೆಗಳ ಮುರುಕು ಗೂಡುಗಳ ನೋಡೀ ನೋಡದಂತೆ
ಭವ್ಯ ಬಂಗಲೆಯ ದಿವ್ಯ ಗೋಪುರವ ಹಾಡಿ ಹೊಗಳುತಿರಲೆ ||೨||

ತುತ್ತನ್ನಕ್ಕಾಗಿ ಬೇಡಿ ಕಾಡುವ ಪುಟ್ಟ ತಿರುಪ ಕೈಯಿ
ಹೆಜ್ಜೆ ಹೆಜ್ಜೆಗೂ ಕಾಲ ತೊಡರಿರಲು ಹಾಡಲೆಲ್ಲಿ ಬಾಯಿ
ಅಂದದುಡಿಗೆಗಳ ಸೇಬುಗಲ್ಲಗಳ ಮಮ್ಮಿ ಡ್ಯಾಡಿ ಎನುವ
ದುಂಡು ದುಂಡಗಿನ ಧನಿಕ ಮಕ್ಕಳನು ಮೆಚ್ಚಿ ಹಾಡಲೇನು ||೩||

ನೂರು ಸಾವಿರದ ದೇವರುಗಳು ಕಚ್ಚಾಡಿ ಮೆರೆಯುವಿಲ್ಲಿ
ದೇವರುಗಳ ಸೃಷ್ಟಿಸಿದ ಮಾನವನ ಮರೆತ ನರಕದಲ್ಲಿ
ಸುತ್ತ ಜಗಕೆ ಕಿವಿ ಕಣ್ಣು ಮುಚ್ಚಿ ತೇಲ್ಗಣ್ಣ ಭಾವದಲ್ಲಿ
ದೇವ ಭಜನೆಯನು ನಾಮ ಕೀರ್ತನೆಯ ಕಟ್ಟಿ ಹಾಡಲೇನು ||೪||

ದುಡಿದು ದಣಿವ ಮೈ ರಕ್ತ ಬೆವರುಗಳ ಧಾರೆ ಧಾರೆಯಿಂದ
ಭಟ್ಟಿ ಉಳಿದ ಸೆರೆ ತುಂಬಿ ಕುಡಿಯುತಿಹ ದಣಿಯ ಹೊಗಳಲೇನು
ಮರುಳು ಕುರಿಗಳನು ಸವರಿ ನೇಯ್ದ ಕಂಬಳಿಯ ಗದ್ದುಗೆಯಲಿ
ಮೆರೆಯುತಿರುವ ನರಭಕ್ಷಕರನು ನಾ ಹೊಗಳಿ ಹಾಡಲೇನು ||೫||

ಸುತ್ತ ಮುತ್ತಿರಲು ಅಂಧಕಾರತೆಯು ಕತ್ತಲಲ್ಲಿ ಕುಳಿತು
ಎಲ್ಲ ಬೆಳ್ಳಗಿದೆ ಇದೇ ಬೆಳಕು ಎನ್ನುತ್ತ ಹಾಡಲೇನು
ಎಲ್ಲ ತೋಟಗದ್ದೆಗಳ ಚೆಲುವ ಹಲ ಹದ್ದು ಮುಕ್ಕುತಿರಲು
ಎಲ್ಲ ಅಂದ ಸುಂದರವು ಎಂದು ನಾ ಬಣ್ಣಿಸಿ ಹಾಡಲೇನು ||೬||

ಕೋಟೆ ಅರಮನೆಯ ಶಿಲ್ಪ ಸಿರಿಗಳನು ಕಟ್ಟಿದವರ ಮರೆತು
ಲೂಟಿ ಮಾಡಿ ಮೆರೆದಂಥ ರಾಜರುಗಳ ಚರಿತೆ ಹೊಗಳಲೇನು
ಕ್ರೌರ್ಯ ಹಿಂಸೆಗಳ ಬಾಯ್ಗಳಲ್ಲಿ ಜನ ಜೀವ ಮಿಡುಕುತಿರಲು
ದಯೆಯೆ ಧರ್ಮಕ್ಕೆ ಮೂಲವೆಂದು ಒಣ ಶಾಂತಿ ಪಠಿಸಲೇನು ||೭||

ಜಾತಿ ಭಾಷೆ ಕುಲ ಧರ್ಮ ದೈವಗಳ ಛಿದ್ರ ಛಿದ್ರ ನೆಲವ
ಭವ್ಯ ದಿವ್ಯ ಭಾರತವೆ ಎಂದು ಎದೆ ತುಂಬಿ ಹಾಡಲೇನು
ತಲೆತಲಾಂತರದ ಮೌಢ್ಯಬಳುವಳಿಯ ಕೊಳೆತು ನಿಂತ ಕೊಳವ
ಗಂಗೆ ತುಂಗೆಯರ ಪುಣ್ಯರಂಗೆಂದು ಹಾಡಿ ಹರಸಲೇನು ||೮||

ಬೆನ್ನಿಗಂಟಿರುವ ಬರಿಯ ಹೊಟ್ಟೆಗಳು ಬಿಕ್ಕಿ ಬಿಕ್ಕುತಿರಲು
ಬೊಜ್ಜು ಹೊಟ್ಟೆಗಳ ಕಮರು ಡೇಗು ಹಾಡುಗಳ ತೇಗಲೇನು
ಹಳ್ಳಿಪಾಡು ಹಾಡುವಾ ಹಕ್ಕಿ ಕುತ್ತಿಗೆಯ ಹಿಚುಕುತಿರಲು
ಡಿಳ್ಳಿದರಬಾರು ಮೋಡಿ ಮೆರಗುಗಳ ಹಾಡು ಕಿರುಚಲೇನು ||೯||

ಸತ್ಯ ಹೇಳಿದರೆ ಕುತ್ತು ಹೊರಿಸುವರು ಕತ್ತಿಯೊತ್ತಿ ಶಿರಕೆ
ಅದಕೆ ಹೆದರಿ ಬರಿ ಸುಳ್ಳು ಗೊಳ್ಳು ಶಬ್ದಗಳ ಬುರುಗು ಬಿಡಲೆ
ಹೇಳುವುದು ಒಂದು ಮಾಡುವುದು ಒಂದು ನಮ್ಮ ಧರ್ಮ ನೀತಿ
ಎಂದಿನಿಂದಲೋ ಬಂದ ರೀತಿ ಅದರಂತೆ ಬುರುಡೆ ಬಿಡಲೆ ||೧೦||

ಜನತೆ ಗಂಡ ಜನನೀತಿ ಹೆಂಡತಿಯು ಗಂಡನೆದುರೆ ಅವಳ
ಸೀರೆ ಹರಿದು ವ್ಯಭಿಚಾರ ಮಾಡಿದರು ಗಂಡ ಸುಮ್ಮನಿರಲು
ಜನರ ತಾಯಿಯನು ಕಿತ್ತಿತಿನುವ ತಾಯ್ಗಂಡರಾಳುತಿರಲು
ನಮ್ಮದೇಶ ಜನತಂತ್ರದೇಶ ಎನ್ನುತ್ತ ಹಾಡಲೇನು ||೧೧||

ಹಾಡು ಬೇಡ ಹಣ ಹೆಂಡ ತಿಂಡಿಕೊಡು ಓಟು ಹಾಕುತೀವಿ
ಓಟು ಹಾಕಿ ನೆಲ ಗೋರಿ ಗೋರಿ ಮುಲುಗುತ್ತ ಮಲಗುತೀವಿ
ಬಹಳ ಹಳೆಯ ಹುಳಿ ಹೆಂಡ ಧರ್ಮವಿದೆ ನಿಶೆಯಲ್ಲಿ ಬಾಳುತೀವಿ
ನಮ್ಮ ನಡೆಸಲಿಕೆ ಗುರುವು ಮಠವು ದೇವರುಗಳಿರುವರಲ್ಲ ||೧೨||

ಆಗಾಗ ಅವನು ಅವತರಿಸಿ ಬರುವ ನಮಗೇಕೆ ಚಿಂತೆಯೆಲ್ಲ
ಎನುತ ಮಲಗಿ ಸತ್ತಿಲ್ಲದಿರುವ ಈ ಜನರ ಮುಂದೆ ನಾನು
ಏನು ಹಾಡಲೀ ಎಂತು ಹಾಡಲೀ ಒಡೆದ ಗಂಟಲಿಂದ
ಬಿರಿದಾ ಒಣಾ ನಾಲಿಗಿಂದ ||೧೩||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಗಮಲ್ಲಿ ದಿಗಮಲ್ಲಿ
Next post ರಸದೊಳಗೆ ಕಸ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys